ಗುರುವಾರ, ಜುಲೈ 10, 2014

ಆಗಮನದಾಶಯದಲ್ಲಿ.....

ಪುಟ್ಟ ಪೋರಿಯ ಕಣ್ಣೆಲ್ಲಾ ನೆಟ್ಟಿದೆ ಅರೆ ಮುಸುಕೆಳೆದಿಹ ಬಾನಿನ ಮೇಲೆ
ಉಂಗುಷ್ಟದ ತುತ್ತತುದಿಯೇರಿ, ಪುಟ್ಟ ಪಾದಗಳ ಮೇಲೇರಿಸಿ
ಎವೆಯಿಕ್ಕದೇ ನೋಡುತ್ತಾ, ಅಂಗಲಾಚಿಸುತ್ತಿದ್ದಾಳೆ ಚಿಗರೆ ಕಂಗಳ ಹರಿಸಿ

ಜಡೆಹಾಕಲೆಳೆವ ಅಮ್ಮ, ಚಿವುಟಿ ಕಾಲೆಳವ ತಮ್ಮ, ಆಗೀಗ ಗಡಬಡಿಸುವ ಅಪ್ಪ
ಇದಾವುದೂ ತಾಗುತಿಲ್ಲವಿಂದು! ಕಾರಣ ಗಮನವೆಲ್ಲಾ ಬಾನು, ಸೂರ್ಯನ ಮುಂದು

ಹೊರಲಾಗದ ಮಣಭಾರದ ಪಾಟೀ ಚೀಲವ ಹೊತ್ತು, ನಿರಾಸೆಯ ನಿಟ್ಟುಸಿರಿಗೆ ಬಾಗಿದೆ ಕತ್ತು
ಇನ್ನೇನು ಧುಮ್ಮಿಕ್ಕಲು ಹೊರಟಿಹ ಅಣೆಕಟ್ಟು, ಮನದ ತುಂಬೆಲ್ಲಾ ಕರಿಮೋಡದ ಚಿತ್ತು

ಮನೆಯಿಂದ ಬಸ್ಸೇರಲಿರುವುದು ಹತ್ತೇ ಹತ್ತು ಹೆಜ್ಜೆ, ಮೆದು ಪಾದದಿ ಘಲ್ಲೆನ್ನುತಿವೆ ಎರಡೆಳೆಯ ಕಾಲ್ಗೆಜ್ಜೆ
ಹತ್ತೇ ಹತ್ತು ನಿಮಿಷದೊಳು ಬಂದು ಬಿಡುವುದು ಬಸ್ಸು, ಆಮೇಲೆ ದಿನವೆಲ್ಲಾ ಇದ್ದಿದ್ದೇ ನೋಟ್ಸು, ಮಿಸ್ಸು, ಕ್ಲಾಸು

ಬಂದು ಬಿಡು ಮಾರಾಯ ಓ ಮಳೆರಾಯ ಬಹು ಬೇಗ, ಕಾದಿಹಳು ಶಬರಿಯಂತೆ  ಕಾಣಲು ನಿನ್ನ ಆವೇಗ
ಬಲಗೈ ಏರಿರುವ ಚೀಲದೊಳು ನೋಡೆ, ಬೆಚ್ಚಗೆ ಕುಳಿತಿದೆ ಅವಳ ಹೊಚ್ಚ ಹೊಸತಾದ ಕೊಡೆ.

ಕರಿಮೋಡ ನೂರ್ಮಡಿಸಿ, ಜಡಿ ಮಳೆ ಜಡೆ ಬಿಡಿಸಿ, ಹರಿದು ಬಿಡಲೊಮ್ಮೆ ಜಲಧಾರೆ
ಕಾಮನಬಿಲ್ಲಿನ ಬಣ್ಣವನೇ ಹೊತ್ತಿಹ ಅಚ್ಚು ಮೆಚ್ಚಿನ ಕೊಡೆ ಬಿಚ್ಚಿ ಕೂಸು ನಗಲೊಮ್ಮೆ ಮನಸಾರೆ.

-ತೇಜಸ್ವಿನಿ.